ಬೆಂಗಳೂರು:
ರಾಜ್ಯದ ಎಲ್ಲ ಮಸೀದಿಗಳಲ್ಲೂ ಪ್ರತಿ ದಿನ ಬೆಳಗ್ಗೆ 5 ಗಂಟೆ ಬದಲಿಗೆ 6 ಗಂಟೆಗೆ ಆಝಾನ್ ಕೂಗಲು ನಿರ್ಧರಿಸಲಾಗಿದೆ. ಬೆಳಗ್ಗೆ 6 ಗಂಟೆಯ ಬಳಿಕ ಆಝಾನ್ ಕೂಗಲು ಮೈಕ್ ಬಳಕೆಗೆ ಸರಕಾರ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮತ್ತು ಮಾರ್ಗಸೂಚಿಯನ್ನು ಪಾಲಿಸಲು ಮುಸ್ಲಿಂ ಧರ್ಮ ಗುರುಗಳು, ಮೌಲ್ವಿಗಳು ಮತ್ತು ಮುಖಂಡರ ಸಭೆ ತೀರ್ಮಾನಿಸಿದೆ.
ಈ ಸಂಬಂಧ ಷರಿಯತ್-ಎ-ಹಿಂದ್ ಸಂಘಟನೆ ಏರ್ಪಡಿಸಿದ್ದ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಂಘಟನೆಯ ಅಮೀರ್-ಎ- ಷರಿಯತ್ ಆಗಿರುವ ಮೌಲಾನ ಸಗೀರ್ ಅಹಮದ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಸಭೆಯ ನಿರ್ಧಾರ ಕುರಿತು ಸುದ್ದಿಗಾರರರಿಗೆ ಮಾಹಿತಿ ನೀಡಿದ ಉಮರ್ ಶರೀಫ್, ‘ಈ ನಿರ್ಧಾರ ರಾಜ್ಯದ ಎಲ್ಲ ಭಾಗಗಳಿಗೂ ಅನ್ವಯವಾಗಲಿದೆ. ಎಲ್ಲ ಮಸೀದಿಗಳ ಮುಖಂಡರೂ ಒಪ್ಪಿಗೆ ನೀಡಿದ್ದಾರೆ. ಇದಕ್ಕೆ ಯಾರ ವಿರೋಧವೂ ವ್ಯಕ್ತವಾಗಿಲ್ಲ. ಬೆಳಗ್ಗೆ 5 ಕ್ಕೆ ಆಝಾನ್ ಕೂಗುವುದಿಲ್ಲ. ಉಳಿದ ಸಮಯದಲ್ಲಿ ಸರಕಾರ ಮತ್ತು ಸುಪ್ರೀಂ ಕೋರ್ಟ್ ತೀರ್ಮಾನವನ್ನು ಚಾಚೂ ತಪ್ಪದೇ ಪಾಲಿಸಲು ನಿರ್ಧರಿಸಿದ್ದೇವೆ’ ಎಂದರು. ‘ಮುಸ್ಲಿಮರು ಕಾನೂನಿಗೆ ಬೆಲೆ ಕೊಡುವುದಿಲ್ಲ ಎಂಬ ವದಂತಿ ಹರಡಿತ್ತು. ನಾವೂ ಕಾನೂನು ಪಾಲಿಸುತ್ತೇವೆ. ವದಂತಿ ಸುಳ್ಳು ಎಂಬುದು ಸಾಬೀತಾಗಿದೆ’ ಎಂದು ಅವರು ಹೇಳಿದರು.
ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಷಫಿ ಸಾ ಅದಿ ಮಾತನಾಡಿ, ‘ಬೆಳಗ್ಗೆ 5 ಕ್ಕೆ ಆಝಾನ್ ಕೂಗುವುದು ಪ್ರಾರ್ಥನೆ ಅಲ್ಲ. ಪ್ರಾರ್ಥನೆ ಮಾಡಲು ಕರೆಯುವ ಸಂದೇಶ. ಆಝಾನ್ಗೆ ಸರಕಾರ ಅಥವಾ ಸುಪ್ರೀಂ ಕೋರ್ಟ್ನ ವಿರೋಧವಿಲ್ಲ. ಬೆಳಿಗ್ಗೆ 6 ಗಂಟೆ ಬಳಿಕ ಮೈಕ್ ಬಳಸಲು ಎಲ್ಲ ಮಸೀದಿಗಳೂ ಪೊಲೀಸರಿಂದ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗುವುದು’ ಎಂದು ಹೇಳಿದರು……