ಸ್ಯಾಂಡಲ್ವುಡ್:
“ಬಿಗ್ ಬಾಸ್” ಖ್ಯಾತಿಯ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸುತ್ತಿರುವ ‘ರಾಮರಸ’ ಚಿತ್ರತಂಡದಿಂದ ಅದ್ದೂರಿಯಾಗಿ ನಾಗರಭಾವಿಯ ಜಿ ಅಕಾಡೆಮಿಯಲ್ಲಿ ಗಣೇಶನ ಪೂಜೆ ನೆರವೇರಿತು. ಬೆಳಗ್ಗೆ ಗಣಪತಿಯನ್ನು ತಂದು ವೈಭವವಾಗಿ ಪೂಜಿಸಲಾಯಿತು. ಆನಂತರ ಸಂಜೆ ಅಷ್ಟೇ ವೈಭವವಾಗಿ ವಿಸರ್ಜನೆಯನ್ನು ಮಾಡಲಾಯಿತು. ನಿರ್ಮಾಪಕ ಗುರು ದೇಶಪಾಂಡೆ, ನಿರ್ದೇಶಕ ಗಿರಿರಾಜ್, ನಾಯಕ ಕಾರ್ತಿಕ್ ಮಹೇಶ್ ಹಾಗೂ ಜಿ ಅಕಾಡೆಮಿಯಲ್ಲಿ ಅಭಿನಯ ಕಲಿತು ಈ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರು ಪೂಜಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
‘ನಾವು ಯಾವುದೇ ಒಂದು ಕೆಲಸ ಆರಂಭ ಮಾಡಬೇಕಾದರೂ ಗಣೇಶನ ಪೂಜೆ ಮಾಡೇ ಆರಂಭ ಮಾಡುತ್ತೇವೆ. ಗಣೇಶ ಆಧಿಪೂಜಿತ. ಈ ಬಾರಿ ನಮ್ಮ “ರಾಮರಸ” ತಂಡದಿಂದ ಅದ್ದೂರಿಯಾಗಿ ಗಣೇಶನ ಪೂಜೆ ನೆರವೇರಿಸಲಾಯಿತು. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ನಮ್ಮ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸೆಪ್ಟೆಂಬರ್ 12 ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಎರಡನೇ ಹಂತದ ಚಿತ್ರೀಕರಕ್ಕೂ ಮುನ್ನ ಗಣಪತಿ ಪೂಜೆ ಮಾಡಿರುವುದು ನಮ್ಮ ತಂಡದ ಎಲ್ಲರಿಗೂ ಸಂತೋಷವಾಗಿದೆ ಎಂದು ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದರು.
‘ರಾಮರಸ’ ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ನಿರ್ದೇಶನ, ಎ.ವಿ. ಕೃಷ್ಣಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಪುನೀತ್ ಆರ್ಯ ಅವರ ಗೀತರಚನೆಯಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನೀಲ್ ಹೆಚ್ ಸಿ ಗೌಡ.