Breaking News

ಸರಳತೆಯೇ ಸೌಂದರ್ಯ ತವಾಂಗ್..!

SHARE......LIKE......COMMENT......

ಟ್ರಾವೆಲ್:

ಅರುಣಾಚಲಪ್ರದೇಶದ ಪಶ್ಚಿಮದಲ್ಲಿರುವ ಈ ಜಿಲ್ಲೆಗೆ ಪ್ರವಾಸಕ್ಕೆ ತೆರಳುವದೇ ಒಂದು ಅವರ್ಣೀಯ ಅನುಭವ. ಏಕೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 3,048 ಮೀಟರ (10,000 ಅಡಿಗಳಷ್ಟು) ಎತ್ತರದಲ್ಲಿದೆ. ಅಷ್ಟೆ ಅಲ್ಲ, ಎರಡು ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. (ಉತ್ತರದಲ್ಲಿ ಟಿಬೆಟ್ ಮತ್ತು ನೈರುತ್ಯದಲ್ಲಿ ಭೂತಾನ್).

ಪಶ್ಚಿಮ ಕಮೆಂಗ್ ದ ಸೇಲ್ ಪರ್ವತ ಶ್ರೇಣಿಗಳು ತವಾಂಗ್ ದ ಪೂರ್ವಕ್ಕೆ ನೈಸರ್ಗಿಕ ಕೋಟೆ ನಿರ್ಮಿಸಿವೆ. ನಗರದ ಪಶ್ಚಿಮದ ಅಂಚಿನುದ್ದಕ್ಕೂ ನಿರ್ಮಿಸಲಾಗಿದ್ದ ತವಾಂಗ್ ಮಠಗಳಿಂದಲೇ ಈ ನಗರಕ್ಕೆ ತವಾಂಗ್ ಎಂಬ ಹೆಸರು ಬಂದಿದೆ. ಇಲ್ಲಿ  “ತಾ” ಎಂದರೆ ಕುದುರೆ ಮತ್ತು “ವಾಂಗ್” ಎಂದರೆ  ಆಯ್ಕೆ ಎಂದರ್ಥ. ಹಾಗಾದರೆ ಈ ನಗರದ ಹೆಸರು “ಕುದುರೆಯ ಆಯ್ಕೆ” ಎಂದಾಯಿತು.

ಮೆರಗ್ ಲಾಮಾ ಲೊದ್ರೆ ಗ್ಯಾಂತ್ಸೊ ಅವರು ತಮ್ಮ ಧಾರ್ಮಿಕ ಚಟುವಟಿಕೆಗಳಿಗಾಗಿ ಆಶ್ರಮ ಒಂದನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿದರು. ಅದಕ್ಕಾಗಿ ಸ್ಥಳಾನ್ವೇಷಣೆಯನ್ನು ಪ್ರಾರಂಭಿಸಿದರು. ಆದರೆ ಯಾವ ಸ್ಥಳವೂ ಅವರಿಗೆ ಆಶ್ರಮ ಯೋಗ್ಯವಾಗಿ ಕಾಣಲಿಲ್ಲ. ದಾರಿಕಾಣದ ಅವರು, ತಮಗೆ ಮಾರ್ಗದರ್ಶನ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ ಕಣ್ತೆರೆದು ನೋಡಿದರೆ ಅವರ ಕುದುರೆ ಕಾಣೆಯಾಗಿ ಬಿಟ್ಟಿತ್ತು! ಈಗಾಗಲೇ ಅವರಿಗೆ ಆಯಾಸವಾಗಿತ್ತು. ಆದರೂ ಅವರು ತಮ್ಮ ಕುದರೆಯನ್ನು ಹುಡುಕಿಕೊಂಡು ಹೋದರು. ಅದು ಒಂದು ಬೆಟ್ಟದ ಮೇಲೆ ನಿಂತಿದ್ದನ್ನು ಕಂಡ ಲಾಮಾ ಇದನ್ನು ಶುಭ ಶಕುನವೆಂದು ಬಗೆದರು. ಈ ಸ್ಥಳಕ್ಕೆ ತವಾಂಗ್ ಎಂದು ಹೆಸರಿಟ್ಟರು.

ತವಾಂಗ್ ನದ್ದು ಸುಕೋಮಲ, ಚಿತ್ರ ಸದೃಶ ಸೌಂದರ್ಯ. ಬಾಲರವಿಯ ಚೊಚ್ಚಲ ಕಿರಣಗಳು ಹಿಮಾಚ್ಛಾದಿತ ಶಿಖರಗಳಿಗೆ ಮುತ್ತಿಕ್ಕುತ್ತಿರುವಂತೆ, ಗುಲಾಬಿ ಪುಷ್ಪಗಳು ಕಿರುನಗೆ ಬೀರುತ್ತ ಸ್ವಾಗತಿಸುತ್ತವೆ. ರವಿಯ ಕೊನೆಯ ಕಿರಣದೊಂದಿಗೆ ಆಗಸದ ತಟ್ಟೆ ಅಸಂಖ್ಯ ತಾರೆಗಳಿಂದ ತುಂಬಿರುತ್ತದೆ. ತವಾಂಗ್ ನ ಹೊರ ಹಾಗು ಒಳ ವಲಯಗಳಲ್ಲಿನ ಪ್ರವಾಸಿ ತಾಣಗಳು ತವಾಂಗ್ ಸಿನಿಮೀಯ ಆಕರ್ಷಣೆಗಳ ಗೂಡಾಗಿದ್ದು, ಇಲ್ಲಿನ ಧಾರ್ಮಿಕ ಕೇಂದ್ರಗಳು , ಶಿಖರಗಳು ಮತ್ತು ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ತವಾಂಗ್ ಆಶ್ರಮ, ಸೆಲ್  ಪಾಸ್ ಹಾಗು ಬಾಲಿವುಡ್ ಚಿತ್ರಗಳು ಚಿತ್ರೀಕರಣಗೊಂಡ ಜಲಪಾತಗಳು, ತವಾಂಗ್ ನ ಪ್ರಮುಖ ಆಕರ್ಷಣೆಗಳಾಗಿವೆ. ಪ್ರಶಾಂತವಾದ  ಸರೋವರಗಳು , ನದಿಗಳು ಮತ್ತು ಆಗಸದ ತಿಳಿನೀಲಿ ಬಣ್ಣವನ್ನು ಪ್ರತಿಬಿಂಬಿಸುವ ಬೃಹತ್ ಜಲಧಾರೆಗಳು, ಒಮ್ಮೊಮ್ಮೆ ಗಿರಿಕಿ ಹೊಡೆಯುವ ಮೋಡಗಳ ರಾಶಿ….. ನೋಡುಗರ ಕಣ್ಮನ ತಣಿಸುವದರಲ್ಲಿ ಸಂಶಯವಿಲ್ಲ. ಪ್ರಕೃತಿಯ ಆರಾಧಕರಿಗೆ-ನಿಸರ್ಗಪ್ರಿಯರಿಗೆ ಈ ಸ್ವರ್ಗ ಹೇಳಿ ಮಾಡಿಸಿದ್ದು.

ತವಾಂಗ್ ನ ಜಾತ್ರೆಗಳು ಮತ್ತು ಉತ್ಸವಗಳು ಜಾತ್ರೆಗಳು ಮತ್ತು ಉತ್ಸವಗಳು  ಅರುಣಾಚಲ ಪ್ರದೇಶದ ಬುಡಕಟ್ಟು ಜನರ ಜೀವನದ ಅವಿಭಾಜ್ಯ ಅಂಗಗಳಾಗಿವೆ. ತವಾಂಗ್ ದ ಮೊನ್ಪ ಜನಾಂಗವೂ ಇದಕ್ಕೆ ಹೊರತಲ್ಲ. ಅರುಣಾಚಲ ಪ್ರದೇಶದ ಇತರ ಬುಡಕಟ್ಟು ಜನರ   ಉತ್ಸವಗಳಂತೆ ಮೊನ್ಪಗಳ ಉತ್ಸವಗಳೂ ಕೂಡ  ಹೆಚ್ಚಾಗಿ ಕೃಷಿ ಮತ್ತು ಧರ್ಮಕ್ಕೆ ಸಂಬಂಧಿಸಿರುತ್ತವೆ . ಪ್ರತಿ ವರ್ಷ ಮೊನ್ಪ ಜನಾಂಗದವರು ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು, ಲೊಸಾರ್ ಉತ್ಸವ. ಇದು ಹೊಸ ವರ್ಷದ ಹಬ್ಬವಾಗಿದ್ದು, ಫೆಬ್ರುವರಿಯ ಕೊನೆಯ ವಾರ ಮತ್ತು ಮಾರ್ಚದ ಮೊದಲ ವಾರದಲ್ಲಿ ಇದನ್ನು ಭಕ್ತಿಪೂರ್ವಕವಾಗಿ, ವಿಜೃಂಭಣೆಯಿಂದ ಆಚರಿಸುವರು.

ತೊರ್ಗ್ಯ, ಮೊನ್ಪಗಳ ಮತ್ತೊಂದು ಪ್ರಮುಖ ಉತ್ಸವ. ಇದನ್ನು ಚಂದ್ರಮಾನ ಪಂಚಾಂಗದ ಹನ್ನೊಂದನೇ ತಿಂಗಳಿನ 28 ನೇ ದಿನದಂದು ಆಚರಿಸುವರು. ಅಂದರೆ ಇದು ಪ್ರತಿವರ್ಷ ಸಾಮಾನ್ಯವಾಗಿ ಜನೇವರಿ ತಿಂಗಳಿನಲ್ಲಿ ಬರುತ್ತದೆ. ಇದೇ ತಿಂಗಳಲ್ಲಿ ಬರುವ ಇನ್ನೊಂದು ಉತ್ಸವ ಸಕ ದವಾ, ರೋಗಗಳು ಮತ್ತು ದುರಾದೃಷ್ಟಗಳಿಗೆ ಕಾರಣವಾಗುವ  ದುಷ್ಟಶಕ್ತಿಗಳ ನಾಶಕ್ಕಾಗಿ ಹಾಗು ಮಾನವರು ಮತ್ತು ಬೆಳೆಗಳಿಗೆ ಯಾವುದೇ ನೈಸರ್ಗಿಕ ವಿಪತ್ತುಗಳು ಎದುರಾಗಬಾರದೆಂಬ ಕಾರಣಕ್ಕಾಗಿ ಈ ಉತ್ಸವವನ್ನು ಆಚರಿಸುವರು.

ಚೊಎಕೊರ್, ಇದು ಇಡೀ ಹಳ್ಳಿಯ ಸಮುದಾಯವು ಆಯೋಜಿಸುವ ಒಂದು ಧಾರ್ಮಿಕ ಮೆರವಣಿಗೆ . ಸುಗ್ಗಿಯ ಕಾಲದಲ್ಲಿ ಬೆಳೆಗೆ ಅಲೌಕಿಕ ರಕ್ಷಣೆ ಒದಗಿಸಲೆಂದು ಹಾಗು ಗ್ರಾಮಕ್ಕೆ ಬರುವ ದುಶ್ಟಶಕ್ತಿಗಳ ದಮನಕ್ಕಾಗಿ ಈ ಹಬ್ಬವನ್ನು ಆಚರಿಸುವರು. ಕೃಷಿ ಚಟುವಟಿಕೆಗಳು ಕಡಿಮೆ ಇರುವ ಚಂದ್ರಮಾನ ಪಂಚಾಂಗದ ಏಳನೇತಿಂಗಳಲ್ಲಿ ಈ ಹಬ್ಬವನ್ನು ಆಯೋಜಿಸಲಾಗುತ್ತದೆ .

ಕಲೆ ಮತ್ತು  ಕರಕುಶಲ ಮೊನ್ಪಗಳಲ್ಲಿ ಅತ್ಯುತ್ತಮ ಕಲಾ ಕೌಶಲ್ಯವಿದೆ. ಆದ್ದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಮೊನ್ಪಗಳು ವಿನ್ಯಾಸ ಗೊಳಿಸಿದ ಸಾಂಪ್ರದಾಯಿಕ ಮತ್ತು ಕಲಾತ್ಮಕ ಕರಕುಶಲ ವಸ್ತುಗಳುಗ್ರಾಹಕರನ್ನು ಕೈಬೀಸಿ ಕರೆಯುತ್ತವೆ. ಈ ಕರಕುಶಲ ಸಾಮಗ್ರಿಗಳು ಸರಕಾರಿ ಕರಕುಶಲ ಕೇಂದ್ರಗಳಲ್ಲೂ ಸಹ ಲಭ್ಯವಿವೆ . ಮರದ ಕೆತ್ತನೆ ಕೆಲಸ , ರತ್ನಗಂಬಳಿ ನೇಯ್ಗೆ ಮತ್ತು ಬಿದಿರು ಪಾತ್ರೆಗಳು ಅತ್ಯದ್ಬುತವಾಗಿ ಮಾಡಲ್ಪಟ್ಟಿರುತ್ತವೆ. ಅವರು ಥಂಕಾ ಚಿತ್ರಕಲೆ ಮತ್ತು ಕೈಯಿಂದ ಮಾಡಿದ ಕಾಗದಗಳ ಮೂಲಕ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.

ಮರದ ಕಲೆಯಿಂದ ತಯಾರಿಸಿದ ಮುಖವಾಡಗಳನ್ನು ತೊರ್ಗ್ಯ  ಹಬ್ಬದ ಸಮಯದಲ್ಲಿ ತವಾಂಗ್ ದ ಧಾರ್ಮಿಕ ಕೇಂದ್ರದ ಅಂಗಳದಲ್ಲಿ  ಪ್ರದರ್ಶಿಸುವ ಧಾರ್ಮಿಕ ನೃತ್ಯಗಳಲ್ಲಿ ಬಳಸಲಾಗುತ್ತದೆ . ಕೆಲವು ಮರದ ಪಾತ್ರೆಗಳು ಡೊಲೊಂ – ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಮುಚ್ಚಳವಿರುವ ಮರದ ಬೌಲ್. ಇದನ್ನು ಊಟ ಮಾಡಲು ಬಳಸುತ್ತಾರೆ. ಶೆಂಗ್ ಖ್ಲೆಂ – ಮರದಿಂದ ಮಾಡಿದ  ಚಮಚ. ಗ್ರುಕ್ – ಚಹಾ ಸೇವನೆಗೆ ಬಳಸಲಾಗುವ ಮರದ  ಕಪ್ . ತವಾಂಗ್ ಭೇಟಿಗೆ ಅತ್ಯುತ್ತಮ ಸಮಯ ತವಾಂಗ್, ವರ್ಷದ ಹೆಚ್ಚಿನ ಕಾಲ ಮಧ್ಯಮ ಹವಾಗುಣವನ್ನು ಅನುಭವಿಸುತ್ತದೆ .

ಮಾರ್ಚ್ ದಿಂದ ಅಕ್ಟೋಬರ್ ವರೆಗಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿಗಳು ಹಿತಕರವಾಗಿರುತ್ತವೆ.ಆದ್ದರಿಂದ ಈ ಕಾಲವನ್ನು ತವಾಂಗ್ ಭೇಟಿಗೆ ಅತ್ಯುತ್ತಮ ಸಮಯ ಎಂದು ಪರಿಗಣಿಸಬಹುದು. ತಲುಪುವುದು ಹೇಗೆ ಅಸ್ಸಾಂನ ಗೌಹಾತಿ ಮತ್ತು ತೇಜ್ಪುರ್ ಮೂಲಕ ದೇಶದ ಇತರ ಭಾಗಗಳಿಂದ ತವಾಂಗ್ ತಲುಪಬಹುದು .  ಗೌಹಾತಿ ಗೆ ಭಾರತೀಯ ವಿಮಾನಯಾನ ಸಂಸ್ಥೆ , ದೆಹಲಿಯಿಂದ ಜೆಟ್ ಏರ್ವೇಸ್ ಮತ್ತು ಸಹಾರಾ ಏರ್ಲೈನ್ಸ್ ಗಳ ದೈನಂದಿನ ವಿಮಾನಗಳು ಇರುತ್ತದೆ . ಕೋಲ್ಕತಾ ಮತ್ತು ದೇಶದ ಇತರ ಭಾಗಗಳಿಂದಲೂ ವಿಮಾನಗಳಿವೆ. ಜೊತೆಗೆ , ಗೌಹಾತಿ ಗೆ ರಾಜಧಾನಿ ಎಕ್ಸ್ಪ್ರೆಸ್  ಸೇರಿದಂತೆ ರೈಲು ಸೇವೆಯನ್ನು ಒದಗಿಸಲಾಗಿದೆ……..