Breaking News

ವಿದ್ಯಾರ್ಥಿ ಭವನಕ್ಕೆ 75ರ ಸಂಭ್ರಮ..!

ಗಾಂಧಿಬಜಾರ್‌ನಲ್ಲಿರುವ ಉಪಾಹಾರ ಮಂದಿರ....

SHARE......LIKE......COMMENT......

ಬೆಂಗಳೂರು:

ಗಾಂಧಿಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನವು ಕೇವಲ ಉಪಾಹಾರ ಮಂದಿರವಲ್ಲ, ಸಾಹಿತ್ಯ ದಿಗ್ಗಜರು ಮತ್ತು ಸಾಧಕರ ನೆನಪಿನ ಚಿತ್ರ ಕುಟೀರ. ಇದಕ್ಕೀಗ 75ರ ಸಂಭ್ರಮ. ಹೀಗಾಗಿ, ಇದೇ 26 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅ. 26ರಂದು ಸಂಜೆ 5.30ಕ್ಕೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ವಿಜ್ಞಾನಿ ಪ್ರೊ. ಸಿ.ಎನ್‌.ಆರ್‌.ರಾವ್‌, ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾ ಮೂರ್ತಿ, ಮಯ್ಯಾಸ್‌ ಸಮೂಹ ಸಂಸ್ಥೆಗಳ ಸ್ಥಾಪಕ ಡಾ. ಪಿ.ಸದಾನಂದ ಮಯ್ಯ, ಅಂಚೆ ಮಹಾ ಪ್ರಬಂಧಕ (ಕರ್ನಾಟಕ ವೃತ್ತ) ಡಾ. ಚಾರ್ಲ್ಸ್ ಲೋಬೊ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ,’’ ಎಂದು ಭವನದ ಮಾಲೀಕ ಅರುಣ್‌ಕುಮಾರ್‌ ಅಡಿಗ ತಿಳಿಸಿದರು.

1943-44ರಲ್ಲಿ ಉಡುಪಿಯ ಸಾಲಿಗ್ರಾಮದ ವೆಂಕಟರಮಣ ಉರಾಳ ಮತ್ತು ಪರಮೇಶ್ವರ ಉರಾಳ ಎಂಬುವವರು ವಿದ್ಯಾರ್ಥಿ ಭವನ ಹೋಟೆಲ್‌ ಆರಂಭಿಸಿದರು. ಆಚಾರ್ಯ ಪಾಠ ಶಾಲೆ ಮತ್ತು ನ್ಯಾಷನಲ್‌ ಕಾಲೇಜಿನ ನಡುವೆ ಆರಂಭವಾದ ಹೋಟೆಲ್‌ಗೆ ವಿದ್ಯಾರ್ಥಿ ಭವನ ಎಂದು ಹೆಸರಿಡಲಾಯಿತು. ಇವರು ನಮ್ಮ ತಂದೆ ರಾಮಕೃಷ್ಣ ಅಡಿಗರಿಗೆ 1970ರಲ್ಲಿ ಹೋಟೆಲ್‌ ಅನ್ನು ಮಾರಾಟ ಮಾಡಿದರು. ಆದರೆ, ಇಂದಿಗೂ ಶುಚಿ, ರುಚಿಯಲ್ಲಿ ರಾಜಿ ಮಾಡಿಕೊಂಡಿಲ್ಲ.. ಎಂದು ತಿಳಿಸಿದರು.

1970ರಲ್ಲಿ ಮಸಾಲೆ ದೋಸೆಗೆ 40 ಪೈಸೆ ಇತ್ತು. ಈಗ 46 ರೂ. ಆಗಿದೆ. ಎಲ್ಲ ವರ್ಗದ ಜನರು ಹೋಟೆಲ್‌ಗೆ ಬಂದು ತಿಂಡಿ ಸೇವಿಸುತ್ತಾರೆ. ಇಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ, ಹೋಟೆಲ್‌ ವಿಸ್ತರಿಸಬಹುದಿತ್ತು. ನಮಗೆ ಲಾಭ ಮಾಡುವ ಉದ್ದೇಶವಿಲ್ಲ. ಹೀಗೆ ಮಾಡಿದರೆ, ಹಲವು ವರ್ಷಗಳಿಂದ ಆಗಮಿಸುತ್ತಿರುವ ಗ್ರಾಹಕರ ಮನಸ್ಸಿಗೆ ಘಾಸಿಯನ್ನುಂಟು ಮಾಡಿದಂತಾಗುತ್ತದೆ. 2008ರಲ್ಲಿ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿಯೇ ಹೋಟೆಲ್‌ ನವೀಕರಿಸಲಾಯಿತು. ಹಲವರು ವಿದ್ಯಾರ್ಥಿ ಭವನವನ್ನು ತಮ್ಮದೆಂದು ಭಾವಿಸಿದ್ದಾರೆ,’’ ಎಂದರು….

ವಿದ್ಯಾರ್ಥಿ ಭವನ ಹೋಟೆಲ್‌ ನಗರದೆಲ್ಲೆಡೆ ತೆರೆಯಬೇಕೆಂಬುದು ಹಲವರ ಬೇಡಿಕೆ. ಆದರೆ, ನಮ್ಮ ತಂದೆ ಒಪ್ಪುತ್ತಿಲ್ಲ. ತಾಜ್‌ಮಹಲ್‌ ಸುಂದರವಾಗಿದೆ ಎಂದ ಮಾತ್ರಕ್ಕೆ ಎಲ್ಲೆಡೆ ಕಟ್ಟಲು ಸಾಧ್ಯವೇ ಎಂಬುದು ತಂದೆಯ ಪ್ರಶ್ನೆ. ಒಂದೊಮ್ಮೆ ಎಲ್ಲೆಡೆ ಹೋಟೆಲ್‌ ಆರಂಭಿಸಿದರೆ, ಶುಚಿ-ರುಚಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟ. ಇದರಿಂದ ಮೂಲ ವಿದ್ಯಾರ್ಥಿ ಭವನದ ಹೆಸರು ಹಾಳಾಗುತ್ತದೆ. ಹೋಟೆಲ್‌ ಮುನ್ನಡೆಸಲು ಹಲವು ಸವಾಲುಗಳನ್ನು ಎದುರಿಸಬೇಕಿದೆ. ಕಾರ್ಮಿಕರ ಕೊರತೆ, ಬೆಲೆ ಏರಿಕೆ ಸೇರಿದಂತೆ ಅನೇಕ ಸವಾಲುಗಳಿವೆ, ಎಂದು ಹೇಳಿದರು…..