ದುಬೈ:
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಎಲ್ಲಾ ಆಟಗಾರರು ಹುಮ್ಮಸ್ಸಿನಲ್ಲಿದ್ದಾರೆ. ಆರ್ಆರ್ ತಂಡ ಕಳೆದೆರಡು ಪಂದ್ಯಗಳನ್ನು ಗೆದ್ದು, ಮೂರನೇ ಪಂದ್ಯವನ್ನು ವಶಪಡಿಸಿಕೊಳ್ಳುವ ಯೋಚನೆಯಲ್ಲಿದೆ. ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಲ್ಕತ್ತ ನೈಟ್ ರೈಡರ್ಸ್ ತಂಡ ಗೆಲ್ಲುವ ನಿರೀಕ್ಷೆಯಲ್ಲಿದೆ. ಆರ್ಆರ್ ತಂಡದ ಆಲ್ರೌಂಡರ್ ರಾಹುಲ್ ತೆವಾಟಿಯಾ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಒಂದೇ ಓವರ್ನಲ್ಲಿ ಐದು ಸಿಕ್ಸರ್ ಬಾರಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದು ಸುಳ್ಳಲ್ಲ. ಸದ್ಯ ಇದೇ ಹುಮ್ಮಸ್ಸಿನಲ್ಲಿ ತೆವಾಟಿಯಾ ಕಣಕ್ಕಿಳಿಯಲು ರೆಡಿಯಾಗಿದ್ದಾರೆ.
ಇಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬೌಲರ್ಗಳು ರಾಹುಲ್ ತೆವಾಟಿಯಾ ವಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಐದು ಸಿಕ್ಸರ್ ಬಾರಿಸುವ ತನಕ ತೆವಾಟಿಯಾ ಬಗ್ಗೆ ಯಾರೊಬ್ಬರು ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಕಾಟ್ರೆಲ್ ಬೌಲಿಂಗ್ನಲ್ಲಿ ಬಾರಿಸಿದ ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳು ಎದುರಾಳಿ ತಂಡಗಳಿಗೆ ಅವರ ಬಗ್ಗೆ ಎಚ್ಚರದಿಂದ ಇರುವಂತೆ ಮಾಡಿದೆ. ಅದುವಲ್ಲದೇ, ಆರ್ಆರ್ ತಂಡ ನಾಯಕ ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್ನಲ್ಲಿ ಇದ್ದಾರೆ.
ಇನ್ನೂಳಿದ ಆಟಗಾರರಾದ ಕನ್ನಡಿಗ ರಾಬಿನ್ ಉತ್ತಪ್ಪ, ಯಶಸ್ವಿ ಜೈಸ್ವಾಲ್ ಲಯಕ್ಕೆ ಬಂದರೆ ಸಾಕು. ಆದರೆ, ತಂಡದ ವೇಗಿ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ದುಬಾರಿಯಾದರೂ, ಕೆಳಕ್ರಮಾಂಕದ ಬ್ಯಾಟಿಂಗ್ಗೆ ಬಲವನ್ನು ತುಂಬಲಿದ್ದಾರೆ. ಕೆಕೆಆರ್ ತಂಡದಲ್ಲಿಯೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಕಲಿಗಳಿದ್ದಾರೆ. ಆ್ಯಂಡ್ರೆ ರಸೆಲ್, ಶುಭಮನ್ ಗಿಲ್, ನಿತೀಶ್ ರಾಣಾ, ಇಯಾನ್ ಆರ್ಗನ್, ಆಲ್ರೌಂಡರ್ ಸುನಿಲ್ ನಾರಾಯಣ್ ತಂಡದ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಕಳೆದ ಪಂದ್ಯದಲ್ಲಿ ಶುಭಮನ್ ಗಿಲ್ ಗೆಲುವಿನ ರೂವಾರಿಯಾಗಿದ್ದರು. ಕೋಲ್ಕತ್ತ ತಂಡವು ಈ ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆದ್ದು, ಇನ್ನೊಂದನ್ನು ಕೈಚೆಲ್ಲಿದೆ. ಒಟ್ಟಾರೆಯಾಗಿ ಉಭಯ ತಂಡಗಳಲ್ಲಿಯೂ ಅಬ್ಬರದ ಬ್ಯಾಟಿಂಗ್ ಮಾಡಬಲ್ಲವರಿದ್ದು, ರನ್ಗಳ ಮಳೆಯೇ ಸುರಿಯುವ ನಿರೀಕ್ಷೆ ಗರಿಗೆದರಿದೆ……