Breaking News

ತುಳಸಿ ಗಿಡ ಮನೆಯಲ್ಲಿದ್ದರೆ ಲಕ್ಷ್ಮಿ ನೆಲೆಸುತ್ತಾಳಾ..!

ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನ ಒಲಿಸಿಕೊಳ್ಳುವುದು ಹೇಗೆ....

SHARE......LIKE......COMMENT......

ಧರ್ಮ-ಜ್ಯೋತಿ:

ಯಾವ ಗುಣಗಳು ನಿಮ್ಮಲ್ಲಿದ್ದರೆ ಅರ್ಥಿಕ ಸಂಕಷ್ಟ ಎದುರಿಸುತ್ತೀರಾ?

ಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು. ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. ಆದರೆ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಒಲಿಸಿಕೊಂಡ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂ ಕಷ್ಟಕರವಾದ ವಿಷಯ.
ಲಕ್ಷ್ಮಿ ದೇವಿಯ ಆಶೀರ್ವಾದ ನಮ್ಮ ಮೇಲೆ ನಿರಂತರವಾಗಿಬೇಕೆಂದರೆ ಕೆಲವು ನಕಾರಾತ್ಮಕ ಅಂಶಗಳಿಂದ ದೂರ ಉಳಿಯಬೇಕಾಗುತ್ತದೆ. ಅಥವಾ ಅಂತಹ ಗುಣಗಳನ್ನು ಬಿಡಬೇಕಾಗುತ್ತದೆ.

ಅನೈರ್ಮಲ್ಯ ಹಾಗೂ ಅವ್ಯವಸ್ಥೆ: 

ಶುಚಿತ್ವ, ಸ್ವಚ್ಛತೆ ಇಲ್ಲದ ಕಡೆ ಸಂಪತ್ತು ಇರುವುದಿಲ್ಲ ಎಂಬ ನಂಬಿಕೆ ಇದೆ. ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಲ್ಲಿ ಲಕ್ಷ್ಮಿ ದೇವಿಯ ಸಾನ್ನಿಧ್ಯವೂ ಇರುವುದಿಲ್ಲ ಎನ್ನುತ್ತಾರೆ. ಆದ್ದರಿಂದ ಸಂಪತ್ತು ವೃದ್ಧಿಯಾಗುವುದಕ್ಕೆ ಸ್ವಚ್ಛತೆಯೂ ಪ್ರಭಾವ ಬೀರಲಿದೆ.

ಸೋಮಾರಿತನ:

ಯಾವುದೇ ಪ್ರಯತ್ನ ನಡೆಸದೇ ಏಕಾಏಕಿ ಸಂಪತ್ತು ಗಳಿಸಲು ಸಾಧ್ಯವಿಲ್ಲ. ಕಷ್ಟಪಡದೇ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾದರೆ ಅನಾರೋಗ್ಯದ ಸಂದರ್ಭ, ಅಥವಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಬೆಳಿಗ್ಗೆ ವಿಳಂಬವಾಗಿ ಏಳುವುದು, ಸಂಜೆ ವೇಳೆ ಮಲಗುವುದು ಸೇರಿದಂತೆ ಸೋಮಾರಿತನ ಬಿಡಬೇಕು ಎನ್ನುತ್ತದೆ ಹಿಂದಿನಿಂದಲೂ ನಡೆದುಬಂದಿರುವ ನಂಬಿಕೆಗಳು.

ವಿಶ್ವಾಸವಿಡುವುದು: 

ನಿಮ್ಮನ್ನು ನೀವು ನಂಬದ ದೇವರನ್ನು ನಂಬಿ ಪ್ರಯೋಜನವಿಲ್ಲ ಎಂದಿದ್ದಾರೆ ಶ್ರೇಷ್ಠ ದಾರ್ಶನಿಕ ಸ್ವಾಮಿ ವಿವೇಕಾನಂದರು. ಅದರಂತೆಯೇ ಸಂಪತ್ತು, ಸಂವೃದ್ಧಿಯನ್ನು ಗಳಿಸಲು ನಮ್ಮ ಮೇಲೆ ನಮಗೆ ನಂಬಿಕೆ, ವಿಶ್ವಾಸ ಇರಬೇಕು ಹಾಗಾದಲ್ಲಿ ಮಾತ್ರ ಲಕ್ಷ್ಮಿ ದೇವಿಯೂ ನಮಗೆ ಒಲಿಯುತ್ತಾಳೆ, ಸದಾ ಕ್ರಿಯಾಶೀಲರಾಗಿರಬೇಕು.

ಅತಿ ಆಸೆ: 

ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ. ಅದರಂತೆ,  ಶ್ರೀಮಂತಿಕೆಯ ಆಸೆ ಗಳಿಸಿದಷ್ಟೂ ಮತ್ತಷ್ಟು ಗಳಿಸಬೇಕೆಂಬ ಅತಿ ಆಸೆಯೂ ಲಕ್ಷ್ಮಿಯ ಸಾನ್ನಿಧ್ಯ ಇಲ್ಲದಂತೆ ಮಾಡುತ್ತದೆ. ಆದ್ದರಿಂದ ಅತಿ ಆಸೆ, ಸ್ವಾರ್ಥ, ಕೋಪ ಇವುಗಳನ್ನು ತ್ಯಜಿಸುವ ಮೂಲಕ ಲಕ್ಷ್ಮಿಯ ಆಶೀರ್ವಾದಕ್ಕೆ ಪಾತ್ರರಾಗಬಹುದಂತೆ.

ತುಳಸಿ ಗಿಡ ಮನೆಯಲ್ಲಿದ್ದರೆ ಲಕ್ಷ್ಮಿ ನೆಲೆಸುತ್ತಾಳಾ?

ಹಿಂದೂ ಧರ್ಮದಲ್ಲಿ ತುಳಸಿ ಪವಿತ್ರ ಸಸ್ಯ ಎಂಬ ನಂಬಿಕೆ ಇದೆ. ವಿಷ್ಣುವಿಗೆ ಪ್ರಿಯಾವಾದ ತುಳಸಿ ಗಿಡವನ್ನು ಭಾರತದಲ್ಲಿ ಬಹುತೇಕ ಪ್ರತಿ ಮನೆಗಳಲ್ಲೂ ಸಹ ಬೆಳೆಸಿ ಪೂಜೆ ಮಾಡುವ ಪದ್ಧತಿ ನಡೆದುಬಂದಿದೆ. ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳಿರುವುದೂ ಸಹ ಅದನ್ನು ಪೂಜನೀಯವಾಗಿ ಗುರುತಿಸಲು ಕಾರಣವಾಗಿದೆ. ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹಲವು ಮಹತ್ವಗಳನ್ನು ಹೊಂದಿರುವ ತುಳಸಿ ಗಿಡವನ್ನು ಮನೆಯಲ್ಲಿ ನೆಡುವಾಗ ಪ್ರಮುಖವಾಗಿ ಗಮನ ಹರಿಸಬೇಕಿರುವ ಕೆಲವೊಂದು ಸಂಗತಿಗಳ ಬಗ್ಗೆ ಮಾಹಿತಿ ಹೀಗಿವೆ.

ಏಕಾದಶಿ ಹಾಗೂ ರವಿವಾರಗಳಂದು ತುಳಸಿ ಎಲೆಗಳನ್ನು ಕೀಳಬಾರದು ಎಂಬ ನಂಬಿಕೆ ಇದೆ. ಆದ್ದರಿಂದ ಆ ದಿನಗಳಲ್ಲಿ ತುಳಸಿಯ ಎಲೆಗಳನ್ನು ಕೀಳಬಾರದು ಎಂಬ ಅಂಶಗಳು ಗಮನದಲ್ಲಿರುವುದು ಉತ್ತಮ. ಒಣಗಿದ ತುಳಸಿ ಗಿಡಗಳನ್ನು ಇಟ್ಟುಕೊಳ್ಳುವುದು, ಸಾಮಾನ್ಯಗಿಡಗಳಂತೆ ಎಸೆಯುವುದು ಸೂಕ್ತವಲ್ಲ. ಅದನ್ನು ನೀರಿನಲ್ಲಿ ವಿಸರ್ಜಿಸುವುದು ಸೂಕ್ತ, ಅವಕಾಶ ಇದ್ದರೆ ನದಿಯಲ್ಲಿ ವಿಸರ್ಜಿಸಿದರೆ ಉತ್ತಮ ಎಂಬ ನಂಬಿಕೆ ಇದೆ. ಒಣಗಿದ ತುಳಸಿ ಗಿಡವನ್ನು ವಿಸರ್ಜಿಸಿದ ನಂತರ ತಕ್ಷಣವೇ ಹೊಸ ಗಿಡವನ್ನು ನೆಡಬೇಕು. ತುಳಸಿ ಗಿಡದ ನಡುವೆ ಮುಳ್ಳಿನ ಗಿಡಗಳನ್ನು ಬೆಳೆಸುವುದನ್ನು ನಿಲ್ಲಿಸಿ, ಅದರ ಬದಲು ತುಳಸಿ ಗಿಡದ ನಡುವೆ ಹೂವಿನ ಗಿಡಗಳನ್ನು ಬೆಳೆಸಬಹುದು.

ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಬೆಳಿಗ್ಗೆ ವೇಳೆ ತುಳಸಿ ಪೂಜೆ ನಡೆಯುತ್ತದೆ. ಬೆಳಿಗ್ಗೆ ಈ ರೀತಿಯಲ್ಲಿ ತುಳಸಿ ಪೂಜೆ ನಡೆಸುವುದರ ಹಿಂದೆ ವೈದ್ಯಕೀಯ ಕಾರಣವಿರಬಹುದು ಎಂದು ಊಹಿಸಲಾಗುತ್ತದೆ. ಅದೇನೆಂದರೆ ತುಳಸಿ ಗಿಡಕ್ಕೆ ಆಮ್ಲಜನಕ ಬಿಡುಗಡೆ ಮಾಡುವ ರೋಗ ನಿರೋಧಕ ಶಕ್ತಿ ಮತ್ತು ಔಷಧಿ ಗುಣಗಳಿವೆ. ಈ ಹಿನ್ನೆಲೆಯಲ್ಲಿ ತುಳಸಿಯ ಗಿಡಕ್ಕೆ ಬೆಳಿಗ್ಗೆ ಎದ್ದು ಪೂಜೆ ಸಲ್ಲಿಸುವುದರಿಂದ ಉಸಿರಾಟಕ್ಕೆ ಶುದ್ಧ ಗಾಳಿ ಸಿಗುತ್ತದೆ. ವಾಸ್ತು ಪ್ರಕಾರವೂ ತುಳಸಿ ಮಹತ್ವ ಪಡೆದುಕೊಂಡಿದ್ದು, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲಗಳು ದೊರೆಯುತ್ತದೆ, ಋಣಾತ್ಮಕ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಕೊನೆಯದಾಗಿ ಎಲ್ಲರಿಗೂ ತಿಳಿದಿರುವಂತೆ ದಿನ ಬೆಳಿಗ್ಗೆ 2-3 ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ……