Breaking News

ಜ. 1ರಿಂದ ಎಸ್ಸೆಸ್ಸೆಲ್ಸಿ, ಪಿಯು ತರಗತಿ ಆರಂಭ..!

SSLC ಮತ್ತು ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ....

SHARE......LIKE......COMMENT......

ಬೆಂಗಳೂರು:

ಬ್ರಿಟನ್ ದೇಶದಿಂದ ಹೊಸ ಸ್ವರೂಪದ ಕೊರೋನಾ ಹರಡುತ್ತಿರುವ ಭಯದ ಮಧ್ಯೆ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಸೆಕೆಂಡ್ ಪಿಯುಸಿ ತರಗತಿಗಳು ಜನವರಿ ಒಂದರಿಂದ ಪ್ರಾರಂಭ ಮಾಡಲು ಸರ್ಕಾರ ನಿರ್ಧರಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ. ವಿಕಾಸಸೌಧದಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿವಿಧ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಕಟ್ಟೆಚ್ಚರಿಕೆಯಿಂದ ತರಗತಿಗಳ ಆಯೋಜನೆಗೆ ವ್ಯಾಪಕ ಸಮಾಲೋಚನೆ ನಡೆಸಿದರು. ಹೊಸ ಸ್ವರೂಪದ ಕೊರೋನಾ ವೈರಸ್ ಭೀತಿ ಬಗ್ಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಹೆಚ್ಚು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲವೆಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಈ ವೈರಸ್ ಬಗ್ಗೆ ಪ್ರತಿದಿನ ರಾಜ್ಯದ ತಜ್ಞರಿಂದ ಅಭಿಪ್ರಾಯಪಡೆದು ಅದರ ಅನುಸಾರವಾಗಿ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ, ಇನ್ನೊಂದು ವಾರದಲ್ಲಿ SSLC ಮತ್ತು ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಲಿದೆ. ಹಾಗೆಯೇ, ಪಠ್ಯ,ಕ್ರಮ (Syllabus) ಕೂಡ ಇದೇ ವಾರ ಬಿಡುಗಡೆಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ತರಗತಿಗಳಿಗೆ ಸಂಭಾವ್ಯ ಮಾರ್ಗಸೂಚಿಗಳು:

1. ಶಾಲೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯ; ತರಗತಿಯಲ್ಲಿ ಗರಿಷ್ಠ 15 ಮಕ್ಕಳಿಗೆ ಅವಕಾಶ.
2. ಮಕ್ಕಳು ಗುಂಪುಗೂಡದಂತೆ ನೋಡಿಕೊಳ್ಳುವುದು.
3. ಮಕ್ಕಳು ತಮ್ಮ ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು; ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಪೋಷಕರು ಘೋಷಿಸಿ ಸಹಿ ಮಾಡಿದ ಪತ್ರ        ತರಬೇಕು.
4. ಶಾಲೆಗಳ ಆರಂಭ ವಿಚಾರದಲ್ಲಿ ಆಯಾ ಜಿಲ್ಲೆಯ ಪಂಚಾಯತ್ ಸಿಇಒಗಳು ನಾಯಕತ್ವ ವಹಿಸಿಕೊಂಡು ಜವಾಬ್ದಾರಿ ನಿರ್ವಹಿಸುವುದು.
5. ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿ.
6. ಮಧ್ಯಾಹ್ದ ಬಿಸಿಯೂಟ ಇರುವುದಿಲ್ಲ; ರೇಷನ್ ವಸ್ತುಗಳನ್ನ ಮನೆಗೆ ಕೊಂಡೊಯ್ಯಲು ಅವಕಾಶ.
7. ಶಾಲೆಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಇರುವುದು.
8. ವಿದ್ಯಾರ್ಥಿಗಳು ಮನೆಯಿಂದಲೂ ಪ್ರತ್ಯೇಕವಾಗಿ ನೀರು ತರುವಂತೆ ಸೂಚಿಸುವುದು.
9. ಶಾಲಾ ಆವರಣ ಸ್ವಚ್ಛತೆಗೆ ಆದ್ಯತೆ.
10. ಎಲ್ಲಾ ಶಾಲೆಗಳಲ್ಲೂ ಐಸೋಲೇಶನ್ ಕೊಠಡಿ ಇರಬೇಕು; ಆರೋಗ್ಯದಲ್ಲಿ ಏರುಪೇರಾಗಿರುವ ಮಕ್ಕಳಿಗೆ ಅಂಥ ಕೊಠಡಿಗಳು ಮೀಸಲು.

ಇದೇ ವೇಳೆ, ಶಾಲೆಗಳಲ್ಲಿ ಮಕ್ಕಳು ಗುಂಪುಗೂಡುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಮಧ್ಯಾಹ್ನದ ಬಿಸಿಯೂಟ ರದ್ದುಪಡಿಸಿ ಮನೆಗೇ ರೇಷನ್ ಕೊಟ್ಟು ಕಳುಹಿಸುವ ನಿರ್ಧಾರ ಮಾಡಿರುವುದಕ್ಕೆ ಕೆಲ ಜಿಲ್ಲೆಗಳ ಪ್ರತಿನಿಧಿಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಬಿಸಿಯೂಟ ಇಲ್ಲದಿದ್ದರೆ ಸಮಸ್ಯೆ ಆಗಬಹುದು. ಎಲ್ಲರೂ ಮನೆಯೂಟ ತರಲು ಸಾಧ್ಯವಿಲ್ಲ. ಈ ಬಗ್ಗೆ ಸಚಿವರು ಮರುಚಿಂತನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈ ಬಗ್ಗೆ ಚರ್ಚಿಸುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ……