Breaking News

‘ಪುನೀತ ನಮನ’ ಕಾರ್ಯಕ್ರಮದ ಸಿದ್ಧತೆ ಹೇಗಿದೆ, ಯಾರೆಲ್ಲ ಬರ್ತಾರೆ..?

ಈ ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ....

SHARE......LIKE......COMMENT......

ಬೆಂಗಳೂರು:

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಕನ್ನಡ ಚಿತ್ರರಂಗಕ್ಕೆ (Sandalwood) ನೀಡಿದ ಕೊಡುಗೆ ಅಪಾರ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಎಲ್ಲ ಕಡೆಗಳಲ್ಲಿ ಪುನೀತ್​ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಕನ್ನಡ ಚಿತ್ರೋದ್ಯಮದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ‘ಪುನೀತ ನಮನ’ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾದರೆ ಈ ಕಾರ್ಯಕ್ರಮಕ್ಕೆ ಹೇಗೆ ತಯಾರಿ ಆಗುತ್ತಿದೆ? ಈ ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಯಾಂಡಲ್​ವುಡ್​ ಮಂದಿಗೆ ಆಹ್ವಾನ

ಪುನೀತ್​ ನಮನ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನ ಇಲ್ಲ. ಸ್ಯಾಂಡಲ್​​ವುಡ್​​ನ 142 ಕಲಾವಿದರಿಗೆ ಆಮಂತ್ರಣ ನೀಡಲಾಗಿದೆ. ಪರಭಾಷೆಯ 40 ಕ್ಕೂ ಹೆಚ್ಚು ಕಲಾವಿದರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಅನಗತ್ಯವಾಗಿ ಅವ್ಯವಸ್ಥೆ ಆದರೆ ನಮ್ಮ ಇಲಾಖೆ ಹೊಣೆಯಲ್ಲ ಎಂಬ ಸೂಚನೆ ಪೊಲೀಸ್​ ಇಲಾಖೆಯಿಂದ ಬಂದಿದೆ.

ದೊಡ್ಮನೆ ಕುಟುಂಬ ಭಾಗಿ

ಪುನೀತ್​ ರಾಜ್​ಕುಮಾರ್​ ಅಗಲಿಕೆ ದೊಡ್ಮನೆಗೆ ನೋವು ತಂದಿದೆ. ಈಗ ಪುನೀತ್​ ಹೆಸರಲ್ಲೇ ಕಾರ್ಯಕ್ರಮ ನಡೆಯುತ್ತಿರುವುದರಿಂದ ದೊಡ್ಮನೆಯ ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಹಾಗೂ ಅವರ ಕುಟುಂಬದವರು ‘ಪುನೀತ ನಮನ’ಕ್ಕೆ ಬರಲಿದ್ದಾರೆ.

ಪಾಸ್ ಇದ್ದವರಿಗೆ ಮಾತ್ರ ಅವಕಾಶ

2000 ಜನರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಸಿಎಂ, ಮಾಜಿ ಸಿಎಂ ಹಾಗೂ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪಾಸ್​ ಇದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶವಿದೆ. ಬೆಂಗಳೂರಿನ ಅರಮನೆ‌ ಮೈದಾನದ ಗಾಯತ್ರಿ ವಿಹಾರ್​​ನಲ್ಲಿ ‘ಪುನೀತ ನಮನ‌’ ಕಾರ್ಯಕ್ರಮ ನಡೆಯಲಿದೆ.

ಯಾರೆಲ್ಲ ಭಾಗಿ?

ಪುನೀತ್​ ಎಲ್ಲ ನಟರ ಜತೆಗೂ ಅನ್ಯೋನ್ಯವಾಗಿದ್ದರು. ಹೀಗಾಗಿ, ಎಲ್ಲಾ ನಟರು ನಾಳೆ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸುದೀಪ್, ಯಶ್, ಗಣೇಶ್, ಶಿವರಾಜ್​​ಕುಮಾರ್, ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ‌ ಕನ್ನಡದ ಎಲ್ಲಾ ಕಲಾವಿದರು ಭಾಗಿ ಆಗುತ್ತಾರೆ. ರಾಜಕೀಯ ರಂಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇಡೀ ಸಚಿವ ಸಂಪುಟ ಭಾಗವಹಿಸಲಿದೆ. ಮೂರು ಮಾಜಿ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ಮೈಸೂರಿನ‌ ಮಹಾರಾಜ ಯದುವೀರ್ ಅವರು ಕೂಡ ಬರಲಿದ್ದಾರೆ.

ಪರಭಾಷೆಯ ಸ್ಟಾರ್​ಗಳು ಭಾಗಿ

ಪರಭಾಷಾ ಚಿತ್ರರಂಗದಿಂದ ತಮಿಳು ನಟ ವಿಶಾಲ್, ರಜನಿಕಾಂತ್, ದಳಪತಿ ವಿಜಯ್, ಅಜಿತ್, ವಿಜಯ್ ಸೇತುಪತಿ, ಚಿರಂಜೀವಿ, ಅಲ್ಲು ಅರ್ಜುನ್, ಜ್ಯೂ. ಎನ್​ಟಿಆರ್, ಪ್ರಭಾಸ್, ಅಮಿತಾಭ್​ ಬಚ್ಚನ್, ರಾಮ್ ಚರಣ್, ಮೋಹನ್ ಲಾಲ್ ಸೇರಿದಂತೆ ಪ್ರಮುಖ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ.

ಕಾರ್ಯಕ್ರಮ ಪಟ್ಟಿ

ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿಗೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಗೀತೆಯ ಮೂಲಕ ನಮನ ಕಾರ್ಯಕ್ರಮ ಆರಂಭ ಆಗುತ್ತದೆ. ವಿಜಯ್ ಪ್ರಕಾಶ್, ಗುರುಕಿರಣ್ ಹಾಗೂ ರಾಜೇಶ್ ಕೃಷ್ಣನ್ ಅವರಿಂದ ಗೀತ ನಮನ ನಡೆಯಲಿದೆ. ಮೂರು ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ.

ಚಿತ್ರ ಪ್ರದರ್ಶನಕ್ಕಿಲ್ಲ ಅಡ್ಡಿ

ಪುನೀತ ನಮನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್​​ಗೆ ಬ್ರೇಕ್ ಹಾಕಲಾಗಿದೆ. ಚಿತ್ರಪ್ರದರ್ಶನ ಹೊರತುಪಡಿಸಿ ಯಾವ ಸಿನಿಮಾ ಕೆಲಸಗಳು ನಡೆಯುವುದಿಲ್ಲ. ಕಾರ್ಯಕ್ರಮಕ್ಕೆ‌ ಎಲ್ಲರೂ ಬರಲಿ ಅನ್ನೋ ಉದ್ದೇಶದಿಂದ‌ ಈ ನಿರ್ಧಾರ ಮಾಡಲಾಗಿದೆ. ಪುನೀತ ನಮನದಲ್ಲಿ ಮನರಂಜನೆಗೆ ಯಾವುದೇ ಅವಕಾಶ‌‌ ಇಲ್ಲದೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭಗೊಂಡು ಸಂಜೆ ಆರು ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ……